ಶ್ರೀ ರಾಯರ ನೆರಳು

 !!ಜ್ಞಾನಾರ್ಪಣಮಸ್ತು!!
~.~
ದೇವಲೋಕದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರು ಮೌನದಿ ಆಸೀನರಾಗಿದ್ದಾರೆ..
ಹರೆಯದ ಯುವಕ. ಅವನ ಸೋತಿರುವ ಆಸೆಯ ಕಂಗಳು, ಮೂಡಿಯೂ ಮೂಡದಂತಿರುವ ಮಂದಹಾಸ,ಮತ್ತೆ ಮತ್ತೆ ಮುಳುಗಿ ಬದಲಾಗಿ ಹೇಳುತ್ತಿರುವ ಅದೆಷ್ಟೋ ಭಾವಗಳು ಅವನ ಖಿನ್ನತೆಯನ್ನು ಸಾರುತ್ತಿವೆ..
ಮೌನ ಮುರಿದು ತುಟಿ ತೆರೆದ ಮಹೇಶ್ವರ- 'ಮಗೂ ಹೀಗೆ ಸುಮ್ಮನಿದ್ದರಾಯಿತೆ.. ಅದೇನಾಗಿದೆಯೆಂದು ತಿಳಿಹೇಳಬಾರದೆ..' ಎನ್ನಲು 'ನಿನಗೆ ತಿಳಿಯದ್ದೇನಿದೆ ಶಿವಾ...' ಎಂದಾಗ, ನಗುತ್ತ ಶಿವ ಕಣ್ಮುಚ್ಚಿದ.
'ಯಾರಿಗೂ ಬರೆಯದ ಹಣೆಬರಹ ನನಗೆ ಬರೆದಿದ್ದೇಕೆ.. ಯಾರಿಗೂ ಕೊಡಬಾರದ ಮನಸ್ಸು ನನಗೆ ಕೊಟ್ಟಿದ್ದೇಕೆ.. ನನ್ನ ಜೀವನದಲ್ಲಿ ದೇವತೆಗಳು ಅತಿಯಾಗಿ ಹುಡುಗಾಟ ಆಡುತ್ತಿರುವುದೇಕೆ...' ಎಂದು ತ್ರಿಮೂರ್ತಿಗಳೆದುರು ಬಂದಿರುವುದು ತಿಳಿಯಿತು.
ಯಾರಿಗೂ ಆಗದಂತದ್ದು ಇವನಿಗೆ ಆಗಿಲ್ಲ.. ಖಿನ್ನತೆಗೆ ಒಳಗಾಗಿ ಹೀಗೆ ಮಾತಾಡುತ್ತಿದ್ದಾನೆ ಎಂದು ಒಳಗೆ ನಗುತ್ತ, 'ಮಗೂ,ನಿನಗಾಗಿರುವ ತಪ್ಪಿಗೆ ಯಾರು ಕಾರಣ ಎಂಬುದನ್ನಾದರೂ ಹೇಳಬಾರದೆ.' ಎಂದಾಗ,
'ಏನು ಹೇಳಲಿ ತಂದೆ.. 'ಸೃಷ್ಟಿಕರ್ತ ನೀನೆ ಎಲ್ಲಾ..' ಎಂದು ಬದಲಾಯಿಸಲಾಗದ ಹಣೆಬರಹ ಬರೆದ ಬ್ರಹ್ಮದೇವನ ಮೇಲೆ ತಪ್ಪು ಹೊರಿಸಲೇ.. ಅಥವಾ ಕುಲದೇವನೆಂದು ಪ್ರೀತಿಯಿಂದ ಪೂಜಿಸುತ್ತಿದ್ದರೂ ನನ್ನತ್ತ ನೋಡುತ್ತಿರದ ಶ್ರೀಹರಿಯನ್ನು ದೂಷಿಸಲೋ.., ಅಥವಾ ಜೀವನಬುಗುರಿಯ ಚಾಟಿ ಹಿಡಿದ ವಿಶ್ವೇಶ್ವರ ನಿನ್ನನ್ನೇ ಈ ಆರೋಪಕ್ಕೆ ಗುರಿಮಾಡಲೋ.. ತಿಳಿಯುತ್ತಿಲ್ಲ.' ಎಂದು ನುಡಿಯುತ್ತಾನೆ..
ಆಗ ಈಶ್ವರ 'ಈ ಮಾತಿಗೆ ನೀವೆನನ್ನುವಿರಿ..' ಎಂದು ಬ್ರಹ್ಮನನ್ನು ಪ್ರಶ್ನಿಸಲು, 'ಮಹೇಶ್ವರ ನಾನೇನು ಹೇಳಲಿ ಈತ ತಿಳಿದಿರುವಂತೆ ಇವನಿಗೆಂದೆ ಪ್ರತ್ಯೇಕ ಹಣೆಬರಹ ಬರೆದಿಲ್ಲ ಎಂಬುದು ನಿನಗೆ ತಿಳಿದ ವಿಷಯವೇ., ಭೂಲೋಕದಲ್ಲಿ ಇವನಂತೆ ಹಲವರು ಇದ್ದಾರೆ,ಅವರು ತಮ್ಮ ದೇವರ ಕೃಪೆಯಿಂದ ನೋವು-ಸಂಕಷ್ಟಗಳನ್ನು ಎದುರಿಸುತ್ತ ಹಣೆಬರಹವನ್ನು ದೂಷಿಸುವುದನ್ನು ಕಡಿಮೆ ಮಾಡಿದ್ದಾರೆ. ಇವನ ದೇವ ಶ್ರೀವಿಷ್ಣು ಒಮ್ಮೆಯಾದರೂ ಇವನ ನೋವುಗಳಿಗೆ ಸ್ಪಂದಿಸಿದ್ದಲ್ಲಿ ಇವನ ಬಾಯಿಂದ ಈ ಮಾತುಗಳು ಹರಿಯುತ್ತಿರಲಿಲ್ಲ ಎಂಬುದು ನನ್ನ ಮಾತು..' ಎನ್ನುತ್ತಾರೆ.
ಆಗ ಶ್ರೀವೆಂಕಟರಮಣ 'ಮಹಾದೇವ ನಿನಗೆ ತಿಳಿದಿರುವಂತೆ ನನ್ನ ಅವತಾರಗಳಿಗೆಲ್ಲ ಅದೆಷ್ಟು ಭಕ್ತರಿದ್ದಾರೆ,ಅವರನ್ನೆಲ್ಲ ಗಮನಿಸಿ ಬರುವಷ್ಟರಲ್ಲಿ ವಿಳಂಬವಾಗಿರಬಹುದೇನೋ ಎನಿಸುತ್ತದೆ.. ಹೆಚ್ಚೇನು ಹೇಳಲಾರೆ, ಆದರೂ ಈ ನನ್ನ ಭಕ್ತನ ಪುಟ್ಟ ಮನಸ್ಸಿಗೆ ಇಷ್ಟು ನೋವಾಗುವಂತೆ ಅದೆಂತ ಹಣೆಬರಹ ಕೆತ್ತಿರಬಹುದು..' ಎಂದು ಮತ್ತೆ ಬ್ರಹ್ಮನನ್ನೇ ದೂರುತ್ತಾರೆ.
ಆಗ ಯುವಕ 'ಶಿವ ನನಗೆ ತಿಳಿದಂತೆ ಒಬ್ಬಾತನ ಜೀವನ ಸಂತುಷ್ಟಗೊಳ್ಳಲು ಮೂಲದಲ್ಲೇ ಅವನ ಹಣೆಬರಹವನ್ನು ಅತ್ಯುತ್ತಮವಾಗಿ ಬ್ರಹ್ಮದೇವ ಬರೆದಿರಬೇಕು ಅಥವಾ ಅವನಣೆಬರಹ ಅಷ್ಟು ಚೆನ್ನಾಗಿಲ್ಲದಿದ್ದರೂ ಬ್ರಹ್ಮದೇವನ ಸ್ವತ್ತಾದ ಸರಸ್ವತಿ ದೇವಿಯಾದರೂ ಒಲಿಯಬೇಕು.. ಹಾಗಾಗಿ...' ಎನ್ನುವಷ್ಟರಲ್ಲಿ ಸರಸ್ವತಿ ಪ್ರವೇಶಿಸಿ,
'ಮಹಾದೇವ, ನನ್ನ ಬ್ರಹ್ಮ ಈತನಿಗೆ ಸ್ವಲ್ಪ ಕಠಿಣವಾಗಿ ಹಣೆಬರಹ ಬರೆದಿರುವುದು ಸರಿಯೆಂದುಕೊಂಡರೂ, ಮುಂದೊಮ್ಮೆ ಈತನಿಂದ ಆರೋಪಕ್ಕೆ ಬ್ರಹ್ಮದೇವ ಗುರಿಯಾಗಬಾರದೆಂದು ನಾನು ಈತನಿಗೆ ಸ್ವಲ್ಪ ಹೆಚ್ಚೇ ಒಲಿದು ವರ ನೀಡಿ ಹರಸಿರುವುದಕ್ಕೆ ಇವನ ತಿಳುವಳಿಕೆ,ಬುದ್ಧಿವಂತಿಕೆಗಳೇ ಸಾಕ್ಷಿ. ಬೇಕಿದ್ದರೆ ಪರೀಕ್ಷಿಸಿ ನೋಡಿ.ಹಾಗಾಗಿ ನಮ್ಮನ್ನು ದೂರುವಂತಿಲ್ಲ..'ಎಂದು ಹೇಳಿಬಿಡುತ್ತಾರೆ.
ಮುಂದೆ ಎಲ್ಲರೂ ಮೌನವಾದಾಗ ಸರಸ್ವತಿದೇವಿಯೇ ಮುಂದುವರೆದು 'ಮಹದೇವ ನಿನಗೆ ತಿಳಿದಂತೆ ಭೂಲೋಕದಲ್ಲಿ ಮಾನವರಿಗೆ ನಾನು-ಯಾರು ಒಲಿದರೇನು ಶ್ರೀ ಲಕ್ಷ್ಮಿ-ವೆಂಕಟೇಶ್ವರರು ಒಲಿದು ಮಾನವನ ಅಂಗೈಗೆ ಹಣ ಬರದಿದ್ದರೆ ಮೊಗದಲ್ಲಿ ಸಂತಸ ಮೂಡುವುದೇ.. ಶ್ರೀಲಕ್ಷ್ಮೀಶ ತನ್ನ ಭಕ್ತ ಈತನಿಗೆ ಕೊಂಚವಾದರೂ ಹಣ ನೀಡಿದ್ದರೆ,ಈತನಲ್ಲಿ ಸಂತಸ ಮೂಡುತ್ತಿತ್ತೇನೋ..' ಎಂದಾಗ ಶಿವನಿಗೆ ಹೌದೆನಿಸುತ್ತದೆ.
ಶಾರದಾ ಮಾತೆ ಹೀಗೆ ಹೇಗೆ ಹೇಳುತ್ತಿದ್ದಂತೆ ಮಹಾಲಕ್ಷ್ಮಿ ಪ್ರತ್ಯಕ್ಷವಾಗಿ,
'ನನ್ನ ಪತಿಯ ಮೇಲೆ ಆರೋಪ ಸಲ್ಲದು,ಶ್ರೀನಿವಾಸ ತನ್ನಲ್ಲಿ ಎಷ್ಟೇ ಸಂಪತ್ತಿದರೂ ತನ್ನ ಭಕ್ತಸಂಕುಲಕ್ಕೆ ಕಿಂಚಿತ್ತೂ ನೀಡುವುದಕ್ಕೂ ಸ್ವಲ್ಪ ಹಿಂದೆ-ಮುಂದೆ ನೋಡುವುದು ಸರಿಯೆನಿಸಿದರೂ ಈ ಭಕ್ತನಿಗೆ ಶ್ರೀನಿವಾಸನಿಗೆ ತಿಳಿಯದಂತೆ ನಾನು ಒಲಿದು ಇವನ ಕಷ್ಟಗಳಲ್ಲಿ ಸ್ಪಂದಿಸಿರುವುದಕ್ಕೆ,ಇವನ ಆರ್ಥಿಕ ಸ್ಥಿತಿಯೇ ಸಾಕ್ಷಿ..' ಎನ್ನುತ್ತಾರೆ.
ಆಗ ಶಿವ ಯೋಚಿಸಿ 'ಬ್ರಹ್ಮ ಅದ್ಹೇಗೆ ಹಣೆಬರಹ ಬರೆದರೂ ಅದು ಮುಖ್ಯವಲ್ಲ, ಶ್ರೀಹರಿ ತನ್ನ ಭಕ್ತಸಂಕುಲಕ್ಕೆ ಸೇರಿದವರೆಲ್ಲರನ್ನೂ ಸರಿಯಾಗಿ ಗಮನಿಸಬೇಕಿತ್ತು....'ಎನ್ನುತ್ತಿದ್ದಂತೆ ಆರೋಪ ಒಪ್ಪದ ಲಕ್ಷ್ಮಿ ವಾದಿಸುತ್ತಿರಲು, ಶಾರದೆಯೂ  ವಾದಕ್ಕಿಳಿಯುತ್ತಾರೆ.
ಹೀಗೆ ಒಬ್ಬರನ್ನೊಬ್ಬರು ದೂರುತ್ತಾ ಇವರೇ ಕಿತ್ತಾಡುವಾಗ ಏನು ಮಾಡುವುದೆಂದು ತಿಳಿಯದೆ ಯೋಚಿಸುತ್ತಿದ್ದಾಗ..,
ನಿರಾಶೆಯ ಮುಖ ಹೊತ್ತು ಕುಳಿತಿದ್ದ ಆ ಯುವಕನೆದೆಯಾಂತರಾಳದಲ್ಲಿ ಸಂತಸದ ದೀವಿಗೆಯೊಂದು ಕಣ್ಣು ಮಿಟುಕಿಸಿ ಅವನ ಮುಖದಲ್ಲಿ ನಿರಾಸೆಯ ಗೆರೆ ಮಾಯವಾಗುತ್ತಾ ಮಂದಹಾಸವೊಂದು ಮಿಂಚಿ ಮರೆಯಾಗುವುದು ವಿಶ್ವೇಶ್ವರನರಿವಿಗೆ ಬಂದು ಆ ಸಂಚಲನಕ್ಕೆ ಕಾರಣರಾದವರು ಇಲ್ಲೇ ಎಲ್ಲೋ ಪಾದವಿತ್ತಿದ್ದಾರೆ.., ಅವರಾರೆಂದು ತಿಳಿಯುವಲ್ಲಿ ಆ ಸಂಚಲನಕ್ಕೆ ಕಾರಣವಾದ ಘನಮಹಿಮ ಜಗನ್ನಾಥ ವಿಠಲ ಪ್ರಿಯ ಶ್ರೀ ಗುರುರಾಯರು ಹೆಜ್ಜೆಯಿಡುತ್ತಾ..
'ಶ್ರೀಜಗದೀಶ್ವರ ನನ್ನ ಶ್ರೀಹರಿಯ ಮೇಲೆ ಅಪವಾದ ಸಲ್ಲದು.. ಈ ಯುವಕನ ಸುಖ-ದುಃಖ ಒಮ್ಮೆ ಕಂಡು ಕಾಣದಂತೆ ಮಿಂಚಂತೆ ಬಂದು ಮರೆಯಾಗುತ್ತವೆ.. ಹಾಗಾಗಿ ಶ್ರೀ ಹರಿ ಗಮನಿಸುವಲ್ಲಿ ಸ್ವಲ್ಪ ತಡವಾಗುತ್ತಿದೆ ಹೌದು',
'ನನ್ನೀ ದೊರೆ ಶ್ರೀಹರಿಯ ಮೇಲೆ ಈ ಆರೋಪ ಬರಬಾರದೆಂದೇ ನಾನೀ ಯುವಕನತ್ತ ಇತ್ತೀಚಿಗೆ ಗಮನವಿಟ್ಟಾಗ ಇವನಲ್ಲಿ ಶಿವರೂಪ ಕಾಮಭಾವವು,ಕೃಷ್ಣರೂಪ ಲಜ್ಜೆ ಪ್ರೇಮಭಾವವು,ಆಸೆಯೂ ಹೆಚ್ಚು ಬೆರೆತು ಮನಸ್ಸು ವಿಚಲಿತವಾಗಿತ್ತು, ಅದೇ ಸಮಯಕ್ಕೆ ಮನೆ-ಮನಗಳಿಂದ ಇವನಿಗೆ ನೋವುಂಟಾಗಿ ಈತ ಒಂಟಿಯಾಗಿ ಆಘಾತ ಅನುಭವಿಸಿ ಖಿನ್ನನಾಗಲು ಸಕಲ ಲೋಕದ ಅಣು-ರೇಣುಗಳಿಂದ ಹಿಡಿದು ಎಲ್ಲರನ್ನೂ ತನ್ನ ದ್ರುಷ್ಟಿಯಿಂದಲೇ ಹೆದರಿಸಿ, ಗೌರಿಸುತ ವಿಘ್ನೇಶ್ವರನನ್ನೂ,ರಾಮಭಕ್ತ ಹನುಮನನ್ನೂ ಹೆದರಿಸಲಾಗದ ಶ್ರೀ ಕಾಲಭೈರವನ ಪೂಜಿಸುವ ಶ್ರೀ ಶನಿಮಹಾಪರಮಾತ್ಮ ಇವನತ್ತ ಸ್ವಲ್ಪ ದೃಷ್ಟಿ ನೆಟ್ಟಿದ್ದೆ ಕಾರಣವಿರಬೇಕು.. ಜೊತೆಗೆ ಲಕ್ಷ್ಮಿ-ಶಾರದೆಯರು ಇವನಿಗೆ ಒಲಿದು ಈತನ ಕಷ್ಟಗಳಿಗೆ ಸ್ಪಂದಿಸದಿದ್ದಲ್ಲಿ ಅದೆನಾಗುತ್ತಿತ್ತೋ...'ಎನ್ನುತ್ತಾರೆ.
ಆಗ ಮಹೇಶ್ವರ 'ಶ್ರೀರಾಯರು ನಿಮ್ಮ ಪಾದಧೂಳು ಇವನ ಸೋಕಿದೊಡನೆ ಇವನಿಗಾದ ಆನಂದ ಕಂಡೆ.. ಇವನ ಕಷ್ಟ-ಸುಖಗಳನ್ನು ಅರಿತ ನೀವೇ ಇವನಿಗೆ ಪರಿಹಾರ ತಿಳಿಸಿರಿ..' ಎಂದಾಗ ರಾಯರು,
' ಮಹಾದೇವೀಶ್ವರ, ಈತನಿಗೆ ಸದ್ಯಕ್ಕೆ ಲಕ್ಷ್ಮಿ-ಸರಸ್ವತಿಯರು ಸ್ವಲ್ಪ ಹೆಚ್ಚು ಅನುಗ್ರಹಿಸಬೇಕು.. ಈತನ ತನುಮನ ಯಾವ ಶಕ್ತಿಗೂ ಕುಗ್ಗದೆ ಶಕ್ತಿಯುತವಾಗಲು ಶ್ರೀಹನುಮನ ಅನುಗ್ರಹವೂ ಸ್ವಲ್ಪ ಬೇಕು.. ಇನ್ನೂ ವಿಶ್ವೇಶ್ವರ ನಿನ್ನ ನೆರವೂ ಇರಬೇಕು..' ಎಂದಾಗ ಮಹೇಶ್ವರ 'ನಮ್ಮೆಲ್ಲರ ನೆರವು ಶ್ರೀರಾಯರ ನೆರಳಿನಲ್ಲೆ ಆಗಲಿ' ಎನ್ನುವಾಗ ಈತನಲ್ಲಿ ಸಂತಸ ಅರಳುತ್ತದೆ.
ಶ್ರೀಗುರುರಾಯರ ನೆರಳಿರಲಿ..
[ಸೂಚನೆ: ವರುಷಗಳ ಕೆಳಗೆ ನನ್ನಲ್ಲಿ ಮೂಡಿದ್ದ ಒಂದು ಕಲ್ಪನೆಗೆ ಶ್ರೀರಾಯರ ಆಗಮನ ಸೇರಿಸಿ ಬರೆದಿದ್ದೇನೆ..
ದೇವರಮೇಲೆ ನನಗೆ ತಿಳಿದಂತೆ ಬರೆದ ನನ್ನ ಪದಗಳ ಮೇಲೆ ದೂರಿದ್ದರೆ ಹೇಳಿ,ತಿದ್ದಿಕೊಳ್ಳುತ್ತೇನೆ..]
~-~

ಹರಸು ಗುರುವೇ..


ಸರ್ವರಿಗೂ ಹೊಸ ವರುಷಕೆ ಸುಸ್ವಾಗತ..
ಈ ಹೊಸವರುಷ ಎಲ್ಲರಿಗೂ ಶುಭತರಲಿ..

ಹೊಸ ವರುಷ ಹರುಷ ತರಲೆಂದು 'ಘನಮಹಿಮ ಜಗನ್ನಾಥ ವಿಠಲ ಪ್ರಿಯ ಶ್ರೀ ಗುರುರಾಯ'ರಲ್ಲಿ ಒಂದು ಪ್ರಾರ್ಥನೆ

(ಚಿತ್ರಕೃಪೆ:ಅಂತರ್ಜಾಲ)

ಸತ್ತ ಕನಸುಗಳು ಬದುಕಲೆಂದು ಕೇಳುತ್ತಿಲ್ಲ
ನರಳುತ್ತಿರುವವು ಉಳಿಯಲಿ ಸಾಕೆನಗೆ
ನಗುತ್ತಿರುವ ಕನಸುಗಳು ಅಳುವುದು ಬೇಡ ಗುರುವೇ..

ಮನದ ಮನೆ ಪ್ರಜ್ವಲಿಸಲೆಬೇಕೆಂದಿಲ್ಲ
ಮಿಣುಕು ದೀಪವೊಂದು ಮಿನುಗಲಿ ಸಾಕು
ಕತ್ತಲಲೆ ಮುಳುಗಿಸಬೇಡ ಗುರುವೇ..

ಸವಿಗನಸೆ ಬೀಳಲೆಂದು ಬೇಕುತ್ತಿಲ್ಲ
ನೆಮ್ಮದಿಯ ನಿದ್ರೆ ಸಾಕೆನಗೆ
ದುಷ್ಟ ಸ್ವಪ್ನಗಳು ಬೀಳುವುದು ಬೇಡ ಗುರುವೇ..

ಎಲ್ಲರ ಪ್ರೀತಿ ಬಯಸುತ್ತಿಲ್ಲ
ಪ್ರೀತಿಸುತ್ತಿರುವವರ ಪ್ರೀತಿ ಉಳಿದರೆ ಸಾಕೆನಗೆ
ಇರುವ ಪ್ರೀತಿಯನ್ನು ಕಳೆಯಬೇಡ ಗುರುವೇ..

ನಿನ್ನ ಮೊಗವನೇ ನೋಡಬೇಕೆಂದಿಲ್ಲ
ನಿನ್ನ ಪಾದ ಮುಟ್ಟುವಂತಾದರೆ ಸಾಕೆನಗೆ
ಪಾದದಡಿಯಲಿ ಮಾತ್ರ ಇಡಬೇಡ ಗುರುವೇ..

ನಿನ್ನ ಕೃಪಾನೋಟ ಸಿಗಲೆಬೇಕೆಂದಿಲ್ಲ
ಕರುಣೆಯ ನೋಟ ಸಾಕೆನಗೆ
ಕೆಂಡಾಮಂಡಲ ನೋಟ ಮಾತ್ರ ಬೇಡ ಗುರುವೇ..

ಸವಿಬೆಲ್ಲ ಮಾತ್ರವೇ ಫಲಿಸಬೇಕೆಂದಿಲ್ಲ
ಬೇವೊಡನೆ ಬೆಲ್ಲವಿರಲಿ ಸಾಕೆನಗೆ
ಬರಿಯ ಬೇವನ್ನೂ ಮಾತ್ರ ನೀಡಬೇಡ ಗುರುವೇ..

~.~


ಪ್ರಾಣದೇವತೆ ನೀನು..

!!ಜ್ಞಾನಾರ್ಪಣಮಸ್ತು!!

[ ಪ್ರೇಮಿಗಳ ದಿನದಂದು ನನ್ನ ಸಾಲುಗಳು ನನ್ನ ಮನದನ್ನೆಗೆ ಅರ್ಪಣೆ..]

~.~

ನನ್ನ ಕಂಗಳ ನೋಟ ನೀನು
ನನ್ನ ಕಿವಿಗಳ ಆಲಿಕೆ ನೀನು
ನನ್ನ ಕೊರಳ ದನಿ ನೀನು
ನನ್ನ ತುಟಿಗಳ ಮೌನ ನೀನು
ನನ್ನ ಕಾಲ್ಗಳ ನಡೆ ನೀನು
ನನ್ನ ಅಂಗೈಗಳ ಆಸರೆ ನೀನು
ನನ್ನ ನಿದಿರೆಯ ಕನಸು ನೀನು
ನನ್ನ ಕನಸಿನ ಕಲ್ಪನೆ ನೀನು
ನನ್ನ ಲೇಖನಿಯ ಅಕ್ಷರ ನೀನು
ನನ್ನ ಮೆದುಳಿನ ಅರಿವು ನೀನು
ನನ್ನುಸಿರ ಚಲನೆ ನೀನು
ನನ್ನ ನೆತ್ತರ ಬಿಸಿ ನೀನು
ನನ್ನ ಹೃದಯದ ಬಡಿತ ನೀನು
ನನ್ನ ನರನಾಡಿಗಳ ಮಿಡಿತ ನೀನು
ನನ್ನ ಮನದಮನೆಯದೀಪ ನೀನು
ನನ್ನ ದೇಹಕೆ ಪ್ರಾಣ ನೀನು
ಪ್ರಾಣದೇವತೆ ನೀನು
~.~

ಯಾಕಪ್ಪ ಹೀಗಾಯ್ತು?!

!! ಜ್ಞಾನಾರ್ಪಣಮಸ್ತು !!


[ನನಗಾದ ಒಂದು ಮರೆಯಲಾಗದ ಅನುಭವವನ್ನು ಇವತ್ತು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.. ತುಂಬಾ ಇಂಟರೆಸ್ಟಿಂಗ್ ಅನಿಸಬಹುದು ಓದಿನೋಡಿ..]


~.~


ನನಗೆ ಅಂತಹ ಹೇಳಿಕೊಳ್ಳುವಂತಹ ಒಳ್ಳೆಯದೇನೂ ಆಗದಿದ್ದರೂ, ಕೆಲವು ದಿನಗಳಿಂದ ನಮ್ಮ ಮನೆದೇವರಾದ ತಿರುಪತಿ ವೆಂಕಟೇಶ್ವರನ ದರ್ಶನ ಮಾಡಬೇಕೆಂಬ ಆಸೆ ಬಂದಿತ್ತು,ಅಂತೆಯೇ ಪರೀಕ್ಷೆ ಮುಗಿಸಿ ಡಿಸೆಂಬರ್ ನ ಕೊನೆಯ ವಾರದಲ್ಲಿ ತಿರುಪತಿಗೆ ಹೋಗಬೇಕೆಂಬ ಯೋಜನೆಯಿದ್ದರೂ ಕಾರಣಾಂತರಗಳಿಂದ ಒಂದು ವಾರ ಮುಂದೂಡಿದೆವು..
ನಾನು ಮತ್ತು ನನ್ನ ಗೆಳೆಯ(ಬಲು ವಿಭಿನ್ನ,ಇವನು ಯಾವಾಗ ಹೇಗೆ ಅಂತ ಹೇಳೋಕಾಗೊಲ್ಲ) ಇಬ್ಬರೂ ಅವಸರವಸರದಲ್ಲಿ ಹೊರಡಲು ಸಿದ್ದರಾದೆವು.. ನನಗೆ ಇದೇ ಮೊದಲ ತಿರುಪತಿ ಪ್ರಯಾಣವಾದರೇ, ಅದಾಗಲೇ ಆತ ಎರಡು ಬಾರಿ ತಿರುಪತಿಗೆ ಹೋಗಿಬಂದಿದ್ದ,ಆದ್ದರಿಂದ ಆತ ಹೇಳಿದಂತೆಯೇ ನಾನು ಕೇಳುತ್ತಿದ್ದೆ..
ಗುರುವಾರ ಸಂಜೆ ಮಂಡ್ಯದಿಂದ ರೈಲಿನಲ್ಲಿ ಹೊರಟು ಶುಕ್ರವಾರ ದರ್ಶನ ಮುಗಿಸಿ ಬರೋಣ ಎಂದಿದ್ದ.
ಅಂತೆಯೇ ಆತ ತಾನು ಊರಿಗೆ(ಬೆಸಗರಹಳ್ಳಿ,ಮದ್ದೂರು) ಹೋಗಿ ರೆಡಿಯಾಗಿ ಮತ್ತೆ ಮಂಡ್ಯಕ್ಕೆ ಬರ್ತೀನಿ,ಇಬ್ಬರೂ ರೈಲಿನಲ್ಲಿ ಹೋಗೋಣ ನೀನು ರೆಡಿಯಾಗಿರು ಎಂದು ಹೇಳಿ ಊರಿಗೆ ಹೋದ.. ನಾನು ಸರಿಯೆಂದು ಮನೆಯವರ ಒಪ್ಪಿಗೆ ಪಡೆದು ಹೊಸಬಟ್ಟೆ ಖರೀದಿಸಿ ಸಂತೋಷದಿಂದ ಹೊರಟು ನಿಂತು ನನ್ನ ಗೆಳತಿಗೆ ವಿಷಯ ಮುಟ್ಟಿಸಿ ಸಂದೇಶ ಕಳಿಸಿ ಅವಳಿಂದ ಪ್ರತ್ಯುತ್ತರ ನಿರೀಕ್ಷಿಸಿ ಕಾಯುತ್ತಿದ್ದಾಗ ಅವಳು ಬೇರೊಂದು ನಂಬರಿನಿಂದ ಕರೆ ಮಾಡಿ ತನ್ನ ನಂಬರಿನಿಂದ ಮಸೇಜ್/ಕಾಲ್ ಹೋಗ್ತಿಲ್ಲ,ಔಟ್ ಗೋಯಿಂಗ್ ಸರ್ವಿಸ್ ಕಟ್ ಆಗಿದೆ,ಅದಿಕ್ಕೆ ಈ ನಂಬರಿನಿಂದ ಕಾಲ್ ಮಾಡಿದೆ,ಸರಿ ಹುಷಾರಾಗಿ ಹೋಗಿಬಾ ಎಂದು ಹಾರೈಸಿದಳು.. ಅವಳ ಫೋನ್ ಔಟ್ ಗೋಯಿಂಗ್ ಕಟ್ ಆಗಿದ್ದು ನನಗೆ ಅಪಶಕುನ ಎನಿಸಿತು,ನಾನೇ ಆ ಸಮಸ್ಯೆ ಬಗೆಹರಿಸಬೇಕು,ಆದರೆ ತಿರುಪತಿಗೆ ಹೋಗಿ ಮತ್ತೆ ಬರೋದು ಎರಡು ದಿನವಾಗುತ್ತೆ ಅಲ್ಲಿವರೆಗೆ ಅವಳು ಯಾರಿಗೂ ಮೆಸೇಜ್/ಕಾಲ್ ಮಾಡದೆ ಹೇಗೆ ಇರ್ತಾಳೆ ಎಂದು ಯೋಚಿಸಿ ಅಂದೇ ಆಫೀಸ್ ಗೆ ಹೋಗಿ ಐಡಿ ಪ್ರೂಫ್ ಕೊಟ್ಟು ಸಮಸ್ಯೆ ಬಗೆಹರಿಸಲು ಹೇಳಿ ಬಂದು ಇನ್ನು 24 ಗಂಟೆಯಲ್ಲಿ ಸರಿಹೋಗುತ್ತೆ ಅಲ್ಲಿವರೆಗೂ ಹೇಗಾದ್ರೂ ಅಡ್ಜಸ್ಟ್ ಮಾಡ್ಕೊ ಎಂದು ಹೇಳಿದೆ.
ಆಗ ನನ್ ಫ್ರೆಂಡ್ ಕಾಲ್ ಮಾಡಿ 'ಲೋ ಮಗಾ ನಾನು ಮದ್ದೂರಲ್ಲೇ ಇರ್ತೀನಿ,ಮಂಡ್ಯಕ್ಕೆ ಬರಕಾಗಲ್ಲ, ತುಂಬಾ ಕೆಲಸ ಇದೆ,ನೀನೆ ಮದ್ದೂರಿಗೆ ಬಾ'ಎಂದ.
ಸರಿ ಎಂದು ನಾನು ಬಸ್ ಹತ್ತಿ ಮದ್ದೂರಿಗೆ ಹೊರಟೆ,ನಾನು ಇದೇ ಮೊದಲಬಾರಿಗೆ ಮಂಡ್ಯ ಬಿಟ್ಟು ಬೇರೆ ಕಡೆ ಬಸ್ ಹತ್ತಿದ್ದು,ನಾನು ಎಂದೂ ಎಲ್ಲಿಯೂ ಹೋದವನಲ್ಲ.
ಮದ್ದೂರು ತಲುಪಿದಾಗ ಆತ 'ರೈಲಿನಲ್ಲಿ ಹೋಗೋದು ಬೇಡ,ತುಂಬಾ ರಷ್ ಇರತ್ತೆ,ಬಸ್ನಲ್ಲೇ ಹೋಗೋಣ' ಎಂದ. ಸಾಮಾನ್ಯವಾಗಿ ನಾನು ಸ್ವಲ್ಪ ಜಿಪುಣ ಆದ್ದರಿಂದ 'ಬೇಡ ಬಸ್ನಲ್ಲಿ ಹೋದರೆ ತುಂಬಾ ಖರ್ಚಾಗುತ್ತೆ,ರೈಲಿನಲ್ಲಿ ಹೋಗೋಣ' ಎಂದು ಎಷ್ಟೇ ಹೇಳಿದರೂ ಕೇಳದೆ 5.30ಕ್ಕೆ ಬೆಂಗಳೂರಿಗೆ ಬಸ್ ಹತ್ತಿಸಿದ.
ನಾನು ನನ್ನ ಗೆಳತಿಗೆ ಬೇರೊಂದು ಸಿಮ್ ಕೊಟ್ಟಿದ್ದೆ,ಅಂದು ಅದೇಕೋ ಅದರಿಂದಲೂ ಮೆಸೇಜ್ ಸೆಂಡ್ ಆಗ್ತಿಲ್ಲ ಎಂದಳು,ಅಯ್ಯೋ ಎಂದುಕೊಂಡು ನನ್ನ ಗೆಳತಿಯೊಂದಿಗೆ ಮೊಬೈಲ್ ಫೋನ್ ಫೇಸ್ಬುಕ್ ಮೂಲಕವೇ ಚಾಟ್ ಮಾಡುತ್ತ ಹೊರಟಿದ್ದೆ..
ನನ್ನ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಬೆಂಗಳೂರಿಗೆ ಬಂದಿದ್ದೆ,ಮೊದಲಬಾರಿಗೆ ಬೆಂಗಳೂರಿಗೆ ಬಂದವರಿಗೆ ಆಗುವ ಪುಳಕಗಳು ನನಗೂ ಆದವು, ಜ್ಞಾನಮೂರ್ತಿಯವರಿಗೆ ವಿಷಯ ತಿಳಿಸಿದೆ.
ಬೆಂಗಳೂರಿನಲ್ಲೇ ಊಟ ಮುಗಿಸಿ ಅಲ್ಲಿಂದ 10.30ಕ್ಕೆ ತಿರುಪತಿ ಬಸ್ ಹತ್ತಿದೆವು,ಆ ಚಳಿಯಲ್ಲಿ ಬಸ್ನಲ್ಲಿ ಮೊದಲ ರಾತ್ರಿ ಪ್ರಯಾಣ ಆದ್ರಿಂದ ಅರೆಬರೆ ನಿದ್ದೆ ಮಾಡುತ್ತ ಬೆಳಿಗ್ಗೆ 4.30ಕ್ಕೆ ತಿರುಪತಿ ತಲುಪಿದೆವು,ತಿರುಪತಿಯಲ್ಲಿ ಇಳಿದಾಗ ನನಗೆ ಏನೋ ಒಂಥರ ಮೈ ಜುಮ್ಮೆನ್ನುವ ಅನುಭವ..
ಬೆಟ್ಟಕ್ಕೆ ಮೆಟ್ಟಿಲೇರುತ್ತ ಹೋಗೋಣವೆಂದು ಬೆಳಿಗ್ಗೆ 5.30ರಿಂದ ಸತತ 3 ಗಂಟೆಗಳ ಕಾಲ ಸುಮಾರು 3000 ಮೆಟ್ಟಿಲೇರುತ್ತ ತಿರುಮಲ ತಲುಪಿದೆವು,ಆ ಮುಂಜಾನೆಯಲ್ಲಿ ಬೆಟ್ಟಗಳ ರಮಣೀಯ ದೃಶ್ಯ ಸೆರೆಹಿಡಿಯಲೂ ಕ್ಯಾಮೆರ ಇರಲಿಲ್ಲ..
ಮೆಟ್ಟಿಲೇರಿ ಬಂದವರಿಗೆ ಬೇಗ ದರ್ಶನವಾಗುತ್ತೆ ಎಂದು ಗೆಳೆಯ ಹೇಳಿದ,ಅಂತೆಯೇ ಮೆಟ್ಟಿಲೇರಿದವರಿಗೆ ಪ್ರತ್ಯೇಕವಾಗಿ ಬೇಗ ದರ್ಶನ ಆಗುವ ದಿವ್ಯದರ್ಶನಕ್ಕೆಂದು ಟಿಕೆಟ್ ನೀಡಿದರು..
ಟಿಕೆಟ್ ಪಡೆದು ಖುಷಿಯಿಂದ ತಿಂಡಿ ತಿಂದು ಇಬ್ಬರೂ ಮುಡಿ ಕೊಟ್ಟು ಸ್ನಾನ ಮಾಡಿ 9.30ಕ್ಕೆ ದರ್ಶನಕ್ಕೆಂದು ಹೊರಟು ಟಿಕೆಟ್ ತೋರಿಸಿದಾಗ ನಮಗೆ ನಾಳೆ ದರ್ಶನ ಸಿಗುತ್ತದೆ,ಇಂದು ಸಿಗುವುದಿಲ್ಲ ಎಂದಾಗ ನಮ್ಮಿಬ್ಬರಿಗೂ ಆಘಾತವಾಯಿತು.. ಟಿಕೆಟ್ ನಲ್ಲಿ VALID ONLY FOR 07-01-12 ಎಂದಿದ್ದನ್ನು ಸರಿಯಾಗಿ ಗಮನಿಸಿರಲಿಲ್ಲ.. ನಾಳೆವರೆಗೂ ಕಾಯಲು ಆಗೊಲ್ಲವೆಂದು ತಕ್ಷಣವೇ 300 ರೂಪಾಯಿ ಕೊಟ್ಟು ಹೋಗುವ ಪ್ರತ್ಯೇಕ ದರ್ಶನಕ್ಕೆ ಹೋಗೋಣವೆಂದು ವಿಚಾರಿಸಿದಾಗ ಅದಾಗಲೇ ಅಲ್ಲಿ ಟಿಕೆಟ್ ಖಾಲಿಯಾಗಿದ್ದವು.. ನನ್ನ ಗೆಳೆಯ ಮುಂದೇನು ಎಂದು ತಲೆಕೆಡಿಸಿಕೊಂಡು ಅಡ್ಡಾಡುತ್ತಿದ್ದ,ನಾನೂ ಅವನ ಹಿಂದೆ ತಿರುಗುತ್ತಿದ್ದೆ...
ಕೊನೆಗೆ ಉಚಿತ ದರ್ಶನವಾದ ಧರ್ಮದರ್ಶನದ ಕ್ಯೂನಲ್ಲಿ ನಿಂತೆವು,ಅದಾಗಲೇ ಅದು ಆಂಜನೇಯನ ಬಾಲದಂತೆ ಬೆಳೆದಿತ್ತು,ಕ್ಯೂನಲ್ಲಿ ನಿಂತು ಕಾಯುತ್ತಿದ್ದರೆ ಸಾಕಪ್ಪ ಈ ತಿರುಪತಿ ಸಹವಾಸ ಎನಿಸುತ್ತಿದ್ದರೂ ಮನೆದೇವರ ದರ್ಶನ ಮಾಡಬೇಕೆಂಬ ಆಸೆಯಿಂದ ಸಹಿಸಿಕೊಂಡಿದ್ದೆ,ಕ್ಯೂ ಮುಗಿಸಿ ಒಂದು ಹಾಲ್ ನಲ್ಲಿ ಕೂರಿಸಲಾಯಿತು,ನಾನು ಅಂದುಕೊಂಡಿದ್ದ ಹಾಲ್ ಇದಾಗಿರಲಿಲ್ಲ. ಹಾಲ್ ನಿಂದ ನೇರ ದೇವರ ದರ್ಶನವೇ,ರಾತ್ರಿ ಹತ್ತಕ್ಕೆ ದರ್ಶನ ಆಗುತ್ತದಂತೆ, ಎಷ್ಟೊತ್ತಾದರೂ ಸರಿ ದರ್ಶನ ಮುಗಿಸಿ ಹೊರಟುಬಿಡೋಣ ನಾನು ಬೇಗ ಹೋಗಬೇಕು ಎಂದಿದ್ದ,ಅದಾಗಲೇ ಆತ ಕಾದು ಕಾದು ಸಾಕಾಗಿದ್ದ..
ಸುಮಾರು 3 ಗಂಟೆಗಳ ಕಾಲ ಹಾಲ್ ನಲ್ಲಿ ಕೂರಿಸಿ ಅಲ್ಲಿದ್ದವರಿಗೂ ನಾಳೆಯೇ ದರ್ಶನ ಸಿಗುವುದೆಂದು ತಿಳಿಸಿ ನಾಳೆ ನೇರ ದರ್ಶನಕ್ಕೆ ಬರಲು ಟಿಕೆಟ್ ನೀಡಿ ಹೊರಕಳಿಸಲಾಯಿತು.. ಏನೇ ಮಾಡಿದರೂ ನಾಳೆಯೇ ದರ್ಶನ ಎಂದು ತಿಳಿದಾಗ ತಲೆಕೆಟ್ಟಂತಾಯಿತು..

ಮಹಾತಿರುವು..:
ಅವನ ಗೆಳೆಯನೊಬ್ಬ ಅವನಿಗೆ ಕರೆ ಮಾಡಿ ತಕ್ಷಣವೇ ಅಲ್ಲಿಂದ ಹೊರಟು ಬಾ ಇಲ್ಲಿ ದೊಡ್ಡ ಸಮಸ್ಯೆ ಉಂಟಾಗಿದೆ ಎಂದಿದ್ದ,ಆಗ ನನ್ನ ಗೆಳೆಯ ನಾನು ಇರಲ್ಲ ಹೊರಡಬೇಕು ನೀನು ಬೇಕಾದರೆ ಉಳಿದುಕೊಂಡಿದ್ದು ದರ್ಶನ ಮಾಡಿ ಬಾ ಇಲ್ಲಾಂದ್ರೆ ಇಬ್ಬರೂ ಹೋಗೋಣ ಬಾ, ಮುಂದಿನ ವಾರ ಮತ್ತೆ ಬಂದು ದರ್ಶನ ಮಾಡೋಣ ಎಂದ.
ಅವನು ಹಾಗೆಂದಾಗ ನಾನು ತುಂಬಾ ದುಃಖಿತನಾಗಿ 'ಲೋ ಮೊದಲಬಾರಿ ಮನೆ ದೇವರಿಗೆ ಬಂದು ಮುಡಿ ಕೊಟ್ಟು ದರ್ಶನ ಮಾಡದೇ ಹೋಗೋದಾ.. ನಮ್ಮ ಮನೆಗೆ ಗೊತ್ತಾದ್ರೆ ಪೂಜೆ ಮಾಡ್ತಾರೆ ಅಷ್ಟೆ! ಹೀಗಾದ್ರೆ ಮೊದಲಸಲವೇ ಹೀಗಾಯ್ತಲ್ಲ ಅಂತ ನಾನು ದಿನಾಗಲೂ ತುಂಬಾ ಕೊರಗಿಬಿಡ್ತೀನಿ,ದರ್ಶನ ಆಗೋವರೆಗೂ ನಂಜೊತೆ ಇರು ಅಷ್ಟೆ! ಎಂದೆ. ಸುಮಾರು ಹೊತ್ತು ಗೋಗರೆದ ನಂತರ ಆತ ನಾಳೆಯೂ ಆಗಲ್ಲ ನನ್ ಮಾತ್ ಕೇಳು,ಮನೆಯವರಿಗೆ ದರ್ಶನ ಆಗಿದೆ ಅಂತ ಹೇಳು,ಮುಂದಿನವಾರ ಖಂಡಿತ ಕರೆದುಕೊಂಡು ಬರ್ತೀನಿ ಎಂದು ಏನೇ ಹೇಳಿದರೂ ನಾನು ಕೇಳದಿದ್ದಾಗ ಒಲ್ಲದ ಮನಸ್ಸಿಂದ ಇರಲು ಒಪ್ಪಿ ರಾತ್ರಿ ಇರಲು ಲಾಡ್ಜ್ ಬುಕ್ ಮಾಡುತ್ತಿದ್ದಾಗ ಆತನಿಗೆ ಮತ್ತೆ ಅವನ ಗೆಳೆಯ ಕರೆ ಮಾಡಿ ಬರಲೇಬೇಕು,ಏನೇ ಆದರೂ ಅಲ್ಲಿರದೆ ಬೇಗ ಬಾ... ಎಂದು ಏನೇನೋ ಹೇಳುತ್ತಿದ್ದ..
ಆಗ ನನ್ನ ಗೆಳೆಯ 'ಪ್ಲೀಸ್ ಅರ್ಥ ಮಾಡ್ಕೊ,ನಾನು ಹೋಗದಿದ್ದರೆ ನನ್ನ ಹುಡುಗಿಯನ್ನು ಕಳೆದುಕೊಳ್ಳಬೇಕಾಗುತ್ತೆ ಅವಳಿಲ್ಲ ಅಂದ್ರೆ ನಾನಿರ್ತೀನಾ,ಇದು ನನ್ನ ಲೈಫ್ ಪ್ರಶ್ನೆ,ಇರಕಾಗಲ್ಲ ಮಗಾ ಅರ್ಥ ಮಾಡ್ಕೊ' ಎಂದಾಗ ನನಗೆ ದಿಕ್ಕು ತೋಚದಂತಾಯಿತು.. ಕಣ್ಣೀರು ಬರೋದಷ್ಟೆ ಬಾಕಿ.
ಅವನು ಇರಲು ತಯಾರಿಲ್ಲ,ನಾನು ಹೊರಡಲು ತಯಾರಿಲ್ಲ.
ಸರಿಯೆಂದು ಅವನನ್ನು ಕಳಿಸಿ ಒಬ್ಬನೇ ಉಳಿದೆ,ನಾನು ಎಂದೂ ಮಂಡ್ಯ ಬಿಟ್ಟು ಬೇರೆ ಕಡೆ ಬಂದವನಲ್ಲ,ಇದ್ದವನಲ್ಲ, ಅಂತಹದರಲ್ಲಿ ಭಾಷೆಯೇ ತಿಳಿಯದ ಹೊರರಾಜ್ಯದಲ್ಲಿ ಇರೋದು ಹೇಗೆಂಬ ಭಯ ಆವರಿಸಿತ್ತು..
ಮೊಬೈಲ್ ಫೋನ್ ಬೇರೆ ಬ್ಯಾಟರಿ ಖಾಲಿ ಆಗಿ ಸ್ವಿಚ್ ಆಫ್ ಆಗಿತ್ತು ರಾತ್ರಿ ಲಾಡ್ಜ್ ನಲ್ಲಿರದೇ ಭಕ್ತರೆಲ್ಲ ಉಳಿದುಕೊಳ್ಳುವ ಹಾಲ್ ನಲ್ಲಿ ಉಳಿದು ಸ್ವಲ್ಪ ಚಾರ್ಜ್ ಮಾಡ್ಕೊಂಡು ಲಗೇಜನ್ನು ಲಾಕರ್ ನಲ್ಲಿ ಇಟ್ಟು ಜೀವ ಅಂಗೈಯಲ್ಲಿಡಿದು ಮಲಗಿದೆ,ಎಚ್ಚರವಾಗಿದ್ದುಕೊಂಡೆ ತುಸು ನಿದ್ರಿಸುತ್ತಾ ಬೆಳಿಗ್ಗೆ 4ಕ್ಕೆ ಎದ್ದು ರೆಡಿಯಾಗಿ ದರ್ಶನಕ್ಕೆ ಹೋಗಬೇಕಾದ ದಾರಿ ಹುಡುಕಿ 5.30ಕ್ಕೆ ಕ್ಯೂನಲ್ಲಿ ನಿಂತು ನಿಟ್ಟುಸಿರು ಬಿಟ್ಟೆ.
ಅಲ್ಲಿ ನನಗೆ ಗೊತ್ತಿದ್ದ ಅರ್ಧಂಬರ್ಧ ಇಂಗ್ಲಿಷ್ ಮಾತಾಡುತ್ತ ಒಬ್ಬರನ್ನು ಪರಿಚಯ ಮಾಡಿಕೊಂಡು ಆದದ್ದೆಲ್ಲ ತಿಳಿಸಿ ದರ್ಶನದವರೆಗೂ ಸಹಾಯ ಯಾಚಿಸಿದೆ,ಅವರು 'ಏನಾಗಲ್ ಎಂದು ಆತ್ಮವಿಶ್ವಾಸ ತುಂಬಿದರು.. ಕ್ಯೂನಿಂದ ಮತ್ತೆ ನಮ್ಮನ್ನು ಹಾಲ್ನಲ್ಲಿ ಕೂಡಿಹಾಕಿದಾಗ ಉರಿದು ಹೋಗಿತ್ತು,ಎಷ್ಟು ಹೊತ್ತಿಗೆ ದರ್ಶನವಾಗುತ್ತೋ ಎಷ್ಟು ಗಂಟೆಗೆ ಊರು ಸೇರುತ್ತೇನೋ ಎನಿಸಿತ್ತು. ಅವರನ್ನು ಕಚ್ಚಿಕೊಂಡೇ ಅವರ ಹಿಂದೆಯೇ ಓಡುತ್ತಾ ಅಂತೂ ಇಂತೂ 1 ಗಂಟೆಗೆ ಸಂತೃಪ್ತಿಯಾಗದಿದ್ದರೂ ತೃಪ್ತಿಯಾಗಿ ದರ್ಶನ ಮುಗಿಸಿದಾಗ ನನ್ನೆಲ್ಲ ಭಾರ ಇಳಿದಿತ್ತು.. ದರ್ಶನದವರೆಗೂ ಜೊತೆಗಿದ್ದ ಅವರಿಗೆ ಧನ್ಯವಾದ ಹೇಳುವಷ್ಟರಲ್ಲಿ ಕಾಣದಾದರು.
ಮತ್ತೆ ಕ್ಯೂ ನಿಂತು ಲಡ್ಡು ತೆಗೆದುಕೊಂಡು ಲಗೇಜ್ ಎತ್ಕೊಂಡಾಗ ಅದಾಗಲೇ ೧೮೦+ ಮಿಸ್ಡ್ ಕಾಲ್ ಬಂದಿದ್ದವು,ನನ್ನ ಗೆಳತಿಯಿಂದ ಒಂದೂ ಮೆಸೇಜ್/ಕಾಲ್ ಇರಲಿಲ್ಲ,ಅವಳ ನಂ. ಸರಿಯಾಗಿಲ್ಲವೆನಿಸಿತು,ಊರಿಗೆ ಹೋದ ತಕ್ಷಣ ಸರಿಮಾಡಿಸಬೇಕು ಎಂದುಕೊಂಡೆ.
ಮನೆಯವರಿಗೆ ದರ್ಶನವಾಯಿತೆಂದು ಕರೆ ಮಾಡಿ ಹೇಳಿದಾಗ ಅಲ್ಲಿಯೇ ಪಕ್ಕದಲ್ಲಿರುವ ಅಲುಮೇಲಮ್ಮನ ದರ್ಶನ ಮಾಡಿ ಆಕಾಶತೀರ್ಥ ನೋಡಿಕೊಂಡು ಬರಲು ಹೇಳಿದರು, ಅಲ್ಲಿ ವಿಚಾರಿಸಿದಾಗ ಅವುಗಳಿಗೆ ಮತ್ತೊಂದು ಬಸ್ ಹಿಡಿದು ಹೋಗಬೇಕೆಂದು ತಿಳಿದಾಗ ಮತ್ತೆ ರಿಸ್ಕ್ ತೆಗೆದುಕೊಳ್ಳುವ ಗೋಜಿಗೆ ಹೋಗದೆ ಸದ್ಯ ವೆಂಕಟೇಶ್ವರನ ದರ್ಶನಕ್ಕೆ ಸಮಾಧಾನ ಪಟ್ಟುಕೊಂಡು ಬೇಗ ಊರು ಸೇರುವ ತವಕದಲ್ಲಿ ತಿರುಪತಿಯಿಂದ ಬೆಂಗಳೂರಿನ ಬಸ್ ಏರಿ ಬೆಂಗಳೂರಿನಲ್ಲಿರುವ ಜ್ಞಾನಮೂರ್ತಿಯವರಿಗೆ ಕರೆ ಮಾಡಿ ದರ್ಶನ ಮುಗಿಸಿ ಬೆಂಗಳೂರಿನ ಬಸ್ ಹತ್ತಿದ್ದೇನೆ 10.30ಕ್ಕೆ ಮೆಜೆಸ್ಟಿಕ್ನಲ್ಲಿರುತ್ತೇನೆ ಎಂದಾಗ ಅವರು ಸರಿಬನ್ನಿ ನೀವು ರಾತ್ರಿ ಬೆಂಗಳೂರಿನಲ್ಲಿಯೇ ಇರಲು ವ್ಯವಸ್ಥೆ ಮಾಡುತ್ತೇನೆ ಬಂದು ಕಾಲ್ ಮಾಡಿ ಎಂದರು.. ಸರಿಯೆಂದು ಎಲ್ಲಿಯೂ ಕಣ್ಮುಚ್ಚದೆ ಬೆಂಗಳೂರು ಸೇರೋ ತವಕದಿಂದಿದ್ದೆ,ಕಾಲ್ ಮಾಡಲು ಫೋನ್ ಸ್ವಿಚ್ ಆಫ್ ಆಗಿತ್ತು,ಬಸ್ನಲ್ಲಿದ್ದವರೊಬ್ಬರ ಹತ್ತಿರ ಕರೆ ಮಾಡಲು ಫೋನ್ ಕೇಳಿದಾಗ ಅವರು ನಿರಾಕರಿಸಿದಾಗ ಮುಖ ಗಂಟಾಯಿತು ಮತ್ತೆ ಯಾರನ್ನು ಕೇಳಲಿಲ್ಲ..
ಬೆಂಗಳೂರು ತಲುಪಿ STD ಮೂಲಕ ಜ್ಞಾನಮೂರ್ತಿಯವರಿಗೆ ಕಾಲ್ ಮಾಡಿದಾಗ ಅವರು 'ನಾನು ತುಂಬಾ ದೂರ ಇದೀನಿ,ಬೈಕ್ ಕೂಡ ಇಲ್ಲ,ಬರಕಾಗಲ್ಲ,ಈಗ ಬಸ್ ಹತ್ತಿದರೆ 2 ಗಂಟೆಗೆ ಮಂಡ್ಯ ತಲುಪುತ್ತೀರಿ,ಅಷ್ಟೊತ್ತಿಗೆ ಊರಿಗೆ(ಮಂಡ್ಯದಿಂದ 12 ಕಿ.ಮೀ.) ಹೇಗೆ ಹೋಗ್ತೀರಿ.. ಒಂದು ಕೆಲಸ ಮಾಡಿ ನೀವು ರೈಲಿಗೆ ಹೋದರೆ ಬೆಳಿಗ್ಗೆ ಮಂಡ್ಯ ಸೇರ್ತೀರಿ ಅಲ್ಲಿಂದ ಬೆಳಿಗ್ಗೆ ಊರಿಗೆ ಹೋಗಿ,ಏನ್ ಮಾಡ್ತೀರಿ' ಎಂದಾಗ ಹೊಸ ಜಾಗದಲ್ಲಿ ಏನು ಮಾಡಲಿ ಎಂದು ಮತ್ತೊಮ್ಮೆ ಕಂಗಾಲಾದೆ.
ಆ ರಾತ್ರಿ 11ರ ಸಮಯದಲ್ಲಿ ಯಾವತ್ತೂ ತಿರುಗಾಡದ ಬೆಂಗಳೂರಲ್ಲಿ ರೈಲ್ವೆ ಸ್ಟೇಷನ್ ಎಲ್ಲಿ ಹುಡುಕಲಿ,ಅದೂ ಅಲ್ಲದೆ ರೈಲಿನಲ್ಲಿಯೂ ತಿರುಗಾಡಿದವನಲ್ಲ ನಾನು.
ಫೋನ್ ಆನ್ ನಲ್ಲಿದ್ದಿದ್ದರೆ ಬೆಂಗಳೂರಿನಲ್ಲಿದ್ದ ನಮ್ಮೂರಿನ ಕೆಲವರಿಗೆ ಕಾಲ್ ಮಾಡಿ ಪರಿಸ್ಥಿತಿ ತಿಳಿಸಿದ್ದರೆ ಏನಾದರೂ ಮಾಡುತ್ತಿದ್ದರು,ಆದರೆ ಬ್ಯಾಟರಿ ಖಾಲಿಯೆ.
ಏನು ಮಾಡುವುದೆಂದು ಯೋಚಿಸಿದೆ..
ಸದ್ಯ ಮಂಡ್ಯ (ಕಲ್ಲಹಳ್ಳಿ)ದ ಲ್ಲಿದ್ದ ನನ್ ರೂಮಿನ ಕೀ ತಂದಿದ್ದೆ.
ಈಗ ಮಂಡ್ಯ ತಲುಪಿ ರೂಮಿನಲ್ಲಿದ್ದು ಬೆಳಿಗ್ಗೆ ಊರಿಗೋಗೋಣವೆಂದು ನಿರ್ಧರಿಸಿ,ಮನೆಗೆ ಫೋನ್ ಮಾಡಿ ಈಗ ಮಂಡ್ಯಕ್ಕೆ ಬಂದು ಬೆಳಿಗ್ಗೆ ಬರುತ್ತೇನೆ ಎಂದು ತಿಳಿಸಿದೆ(ನಾನು ಒಂಟಿಯಿರುವ ವಿಷಯ ಮನೆಯವರಿಗೆ ತಿಳಿದಿರಲಿಲ್ಲ, ಗೆಳೆಯನ ಜೊತೆಯೇ ಇದ್ದೇನೆಂದು ತಿಳಿದಿದ್ದರು)..
ನಂತರ ಮೈಸೂರಿಗೆ ಹೊರಡುವ ಬಸ್ ವಿಚಾರಿಸಿದಾಗ ಪಕ್ಕದ ಸೆಟಲೈಟ್ ಬಸ್ ನಿಲ್ದಾಣಕ್ಕೆ ಹೋಗಬೇಕೆಂದರು,ಅಯ್ಯೋ ಅಲ್ಲಿಗೆ ಹೇಗೆ ಹೋಗಲಿ?
ಇಲ್ಲಿಂದಲೇ(ಮೆಜೆಸ್ಟಿಕ್) ಮೈಸೂರಿಗೆ ಬಸ್ ಇಲ್ಲವೇ ಎಂದು ಟಿಸಿಯವರನ್ನ ವಿಚಾರಿಸಿದಾಗ ರೇಗಿಬಿಟ್ಟರು.. ಆಗ ಟೆಲಿಫೋನ್ ಬೂತಿನವನು 17ನೇ ಪ್ಲಾಟ್ ಫಾರಂನಿಂದ ಸೆಟಲೈಟ್ ಗೆ ಬಸ್ ಹೋಗ್ತವೆ ಅಲ್ಲಿಂದ ಮೈಸೂರಿಗೆ ಬಸ್ ಇರ್ತವೆ ಎಂದ. ಅಷ್ಟೊತ್ತಿಗೆ ನಾನು ಪಕ್ಕದ ಯಾವುದೋ ಸ್ಟ್ಯಾಂಡೇ ಸೆಟಲೈಟ್ ಎಂದು ಅಲ್ಲಿ ನೋಡಿ ಬಂದಿದ್ದೆ.
ಅಲ್ಲೆಲ್ಲಿಯೂ ನಾನು ಬೆಂಗಳೂರಿಗೆ ಹೊಸಬನೆಂದು ತೋರಿಸಿಕೊಳ್ಳದೆ ಎಲ್ಲ ತಿಳಿದವನಂತೆ ಅಡ್ಡಾಡುತ್ತಿದ್ದೆ.
ಅಂದು ಬೆಳಿಗ್ಗೆ ಕ್ಯೂನಲ್ಲಿ 1 ಲೋಟ ಹಾಲು,ದರ್ಶನದ ನಂತರ ಒಂದಿಷ್ಟು ಪ್ರಸಾದ,ತಿರುಪತಿ-ಬೆಂಗಳೂರು ಮಧ್ಯೆ ಬಸ್ ನಿಲ್ಲಿಸಿದ್ದಾಗ 1 ಟೀ & ಬಾಳೆಹಣ್ಣು ಇಷ್ಟೇ ಸೇವಿಸಿದ್ದದ್ದು.
ಸರಿಯೆಂದು ಸೆಟಲೈಟ್ನಲ್ಲಿ ತಿನ್ನೋಕೆ ಏನಾದರೂ ತೆಗೆದುಕೊಂಡು ಹೋಗೋಣವೆಂದುಕೊಂಡು ಅಂತೂ ಇಂತೂ ಸೆಟಲೈಟ್ ತಲುಪಿದೆ. ಅಲ್ಲಿ ಅದಾಗಲೇ ಮೈಸೂರು-ಮಡಿಕೇರಿ ಎಂಬ ಹೆಸರಿನ ಬಸ್ಸೊಂದು ಹೊರಟು ನಿಂತಿತ್ತು,ತಿನ್ನಲು ಏನಾದರೂ ತೆಗೆದುಕೊಳ್ಳೋದನ್ನೂ ಮರೆತು ಅವಸರದಲ್ಲಿ ಬಸ್ ಹತ್ತಿ ಮಂಡ್ಯಕ್ಕೆ ಟಿಕೆಟ್ ತೆಗೊಂಡು ಇನ್ನೇನು ಇಲ್ಲವೆಂದು ನಿಶ್ಚಿಂತೆಯಿಂದ ಕುಳಿತೆ.
2 ದಿನದಿಂದ ನಿದ್ರೆಯಿಲ್ಲದೆ ಕಣ್ಣು ಚುಚ್ಚುತ್ತಿದ್ದವು,ಹೊಟ್ಟೆ ಬೇರೆ ಹಸಿಯುತ್ತಿತ್ತು,ನನ್ನ ಗ್ರಹಾಚಾರಕ್ಕೆ ಮತ್ತೆಲ್ಲೂ ಅಂಗಡಿಗಳು ತೆರೆದಿರಲಿಲ್ಲ.
ಹಾಗೂ ಹೀಗೂ 1.30ಕ್ಕೆ ಕಲ್ಲಹಳ್ಳಿಯಲ್ಲಿ ಇಳಿದೆ,ರೋಡ್ ಪಕ್ಕದಲ್ಲೇ ಇದ್ದ ನನ್ ರೂಮಿಗೆ ಹೋಗಿ ಲಗೇಜಿಳಿಸಿ ಅಂಗಿ ಬಿಚ್ಚೆಸೆದು ಅಲ್ಲಿದ್ದ ನೀರನ್ನು ಒಂದೇ ಸಮನೆ ಗಟಗಟ ಕುಡಿದು ಚೂರು ಲಡ್ಡು ತಿಂದು, ಬದುಕಿದೆನು ಎಂದುಕೊಂಡು ಮೊಬೈಲ್ ಚಾರ್ಜ್ ಹಾಕಿ ಆನ್ ಮಾಡಿದಾಗ ನನ್ನವಳ ನಂ.ನಿಂದ ಸಂದೇಶ ಬಂದಿದ್ದನ್ನು ನೋಡಿ ಅಬ್ಬಾ ಸರಿಯಾಗಿದೆ ಎಂದುಕೊಂಡು ಅವಳಿಗೊಂದು ಖಾಲಿ ಸಂದೇಶ ಕಳಿಸಿ,ಫ್ಯಾನ್ ಹಾಕೊಂಡು ಆರಾಮಾಗಿ ಕಣ್ಮುಚ್ಚಿದೆ.
ದೇವ್ರೆ ಯಾಕಪ್ಪ ಹೀಗಾಯ್ತು?!




~.~


Related Posts Plugin for WordPress, Blogger...