ಕೂಗೊಮ್ಮೆ ಪ್ರಾಣಪಕ್ಷಿಯ!!

!!ಜ್ಞಾನಾರ್ಪಣಮಸ್ತು!!

~.~


ಹೇ ಭಗವಂತಾ..
ಹೊಲಿ ನನ್ನ ತುಟಿಗಳನು
ಒಣಮಾತು ಉದುರದಿರಲಿ..
ಮೂಕಮನಸು ನನಗಿರಲಿ..

ಕತ್ತಲಾಗಿಸು ನನ್ನೀ ನೋಟವ
ಕಳ್ಳನೋಟ ಇಣುಕದಿರಲಿ..
ಶೂನ್ಯ ನೋಟವೆ ನನಗಿರಲಿ..

ಕೊಟ್ಟು ಬಿಡೋ ಕಿವುಡುತನವ
ತೆಗಳಿಕೆಗಳು ಕಿವಿ ತಟ್ಟದಿರಲಿ..
ಹೊಗಳಿಕೆಗಳೂ ಮುಟ್ಟದಿರಲಿ..

ಕಟ್ಟಿಬಿಡು ಈ ತೋಳುಗಳ
ಆಸರೆಗೆ ಚಾಚದಿರಲಿ..
ಆಸೆಯ ಬಾಚಿ ಅಂಗಲಾಚದಿರಲಿ..

ನಿಷ್ಕ್ರಿಯಗೊಳಿಸು ನನ್ನ ನಡೆಯ
ಕಾಣದ ಕಡೆ ಹೆಜ್ಜೆ ಹೊರಡದಿರಲಿ..
ನೆಮ್ಮದಿ ಹರಸಿ ಸಾಗದಿರಲಿ..

ಕಲ್ಲಾಗಿಸೋ ಈ ಎದೆಯ
ಕಷ್ಟಗಳಿಗೆ ಕುಗ್ಗದಿರಲಿ..
ಮರುಗಿ ಕರಗದಿರಲಿ..

ಆರಿಸಿಬಿಡು ಹೃದಯದೀಪವ
ಪ್ರೀತಿ ಪ್ರೇಮಗಳು ಬೆಳಗದಿರಲಿ..
ಬಾಳೇ ಹೊಳೆಯದಿರಲಿ..

ಮುಚ್ಚಿಬಿಡೋ ಕಣ್ ಕೊಡವ
ಕಂಬನಿ ತುಂಬಿ ತುಳುಕದಿರಲಿ..
ನೋವು ಸೋರದಿರಲಿ..

ಹೇ ಭಗವಂತಾ..
ಕೂಗೊಮ್ಮೆ ಈ ಪ್ರಾಣಪಕ್ಷಿಯ
ಮಲಗಿ ಬದುಕ ಕನಸ ಕಾಣದಿರಲಿ..

ಹೇ ಭಗವಂತಾ...
ಕೂಗೊಮ್ಮೆ ಪ್ರಾಣಪಕ್ಷಿಯ!!

~-~


ಜೈ ಗಣೇಶ..!

!!ಜ್ಞಾನಾರ್ಪಣ ಮಸ್ತು!!


[
ಸಲದ ನಮ್ಮ 'ಶ್ರೀ ಪಟ್ಟಲದಮ್ಮ ಗೆಳೆಯರ ಬಳಗ'ದವರ ಗಣಪತಿ ಹಬ್ಬದ ಸಂಭ್ರಮ..]


ಕಳೆದ ವರ್ಷ ಗಣಪತಿ ಕೂರಿಸುವಲ್ಲಿ ನಮ್ಮನಮ್ಮಲ್ಲೆ ಕೆಲವು ಮನಸ್ತಾಪಗಳುಂಟಾಗಿ ಮುಂದಿನ ವರ್ಷದಿಂದ ನಮ್ಮ ಏರಿಯಾದ ನಮಗಿಂತ ಕಿರಿಯರಿಗೆ ಈ ಕೆಲಸ ವಹಿಸಿ ನಾವು ಜೊತೆಗಿದ್ದು ಸಹಾಯ ಮಾಡುವುದೆಂದು ಮಾತಾಗಿತ್ತು. ಆದರೆ ಅದೇಕೋ ಮನಸು ಬದಲಿಸಿದ ನಮ್ಮವರು ತಾವೇ ಗಣಪತಿ ಕೂರಿಸೋ ಕಾರ್ಯಕ್ಕೆ ಮುಂದಾದರು.
ಯಾವ ವರ್ಷವೂ ಗಣಪತಿ ಹಬ್ಬದಂದು ಕಟ್-ಔಟ್ ಹಾಕಿಸುತ್ತಿರಲಿಲ್ಲ,ಈ ಸಲ ಕೆಳಗಿನ ಏರಿಯಾದವರು ಸುಮಾರಾದ 1 ಕಟೌಟ್ ಕಟ್ಟಿದ್ದರು,ಇದನ್ನು ಕಂಡ ನಮ್ ಹುಡುಗರಿಗೆ ಏನಾಯ್ತೊ ಮಾರನೆಯ ದಿನ ತಾವು 1 ಕಟೌಟ್ ಹಾಕಿಸಿಯೇ ಬಿಟ್ಟಿದ್ರು. ಎಂಥ ಕಟೌಟ್ ಅಂತೀರ ಅಬ್ಬಬ್ಬ! ಹಿಂದೆ ಯಾರು ಹಾಕಿಸಿರಬಾರದು,ಮುಂದೆ ಯಾರು ಹಾಕಿಸಬಾರದು ಅಂತಹ ಬಹುದೊಡ್ಡ 45 ಜನರ ಪೋಟೊಗಳನ್ನೊಳಗೊಂಡ ಕಟೌಟ್.
ಈ ಸಲ ಸ್ವಲ್ಪ ಜೋರಾಗಿಯೇ ಗಣಪತಿ ಕೂರಿಸಬೇಕೆಂದುಕೊಂಡಿದ್ದರಿಂದ ನಮ್ಮ ಬಳಗದ ಪ್ರತಿಯೊಬ್ಬರೂ 500 ರೂಪಾಯಿ ಕೊಡಬೇಕೆಂದು ತೀರ್ಮಾನವಾಗಿತ್ತು. 10 ಅಡಿ ಎತ್ತರದ ಗಣಪನನ್ನು ಬುಕ್ ಮಾಡಿಯೂ ಆಗಿತ್ತು.ಹಬ್ಬದ ಹಿಂದಿನ ದಿನ ಗಣಪನನ್ನು ಕೂರಿಸಲಾಗುವಷ್ಟು ದೊಡ್ಡ ಚಪ್ಪರ ಹಾಕಲು ಒಂದು ದಾರಿಯಲ್ಲಿ ವಿಸರ್ಜನೆಯವರೆಗೆ ಪ್ರಯಾಣವನ್ನೇ ರದ್ದುಗೊಳಿಸಲಾಯಿತು.
ಅಂತೂ ಇಂತೂ ಊರಿನ ಕೆಲವೂ ಯಜಮಾನರುಗಳಿಂದಲೂ ಹಣ ಸಂಗ್ರಹಿಸಿಕೊಂಡು 16000 ಕೊಟ್ಟು ಗಣಪತಿಯನ್ನು ತಂದೆವು. ಆ ದೊಡ್ಡ ಮೂರ್ತಿಯನ್ನು ರಸ್ತೆಯಲ್ಲಿದ್ದ ವಿದ್ಯುತ್/ದೂರವಾಣಿ/ಕೇಬಲ್ ವೈರುಗಳ ಜೊತೆ ಎಣಗಾಡಿಕೊಂಡು ತರುವಷ್ಟರಲ್ಲಿ ಸಾಕು ಸಾಕಾಗಿತ್ತು,ಆ ಮಣಬಾರದ ಗಣಪತಿಯನ್ನು ಚಪ್ಪರದಡಿ ಕೂರಿಸಲು ಹರಸಾಹಸ ಮಾಡಬೇಕಾಯಿತು,ಅದು ಮಣ್ಣಿನದ್ದಾಗಿದ್ದರಂತು ಎತ್ತಲಾಗುತ್ತಲೇ ಇರಲಿಲ್ಲ ಬಿಡಿ. ಸಾವಿರಾರು ರುಪಾಯಿಯ ಹೂಹಾರ ಹಾಕಿದ್ದರೂ ಆ ದೊಡ್ಡಮೂರ್ತಿಗೆ ಹೂ ಸಾಕಾಗಿರಲಿಲ್ಲ. ನಾವು ಕಟ್ಟಿದ್ದ ಚಪ್ಪರದಲ್ಲಿ ಅಡ್ಜಸ್ಟ್ ಮಾಡಿಕೊಂಡು ಗಣಪ ಕುಳಿತಿದ್ದ.
ಪ್ರತಿ ಸಲ ಕೂರಿಸುವ ದಿನ ನಮ್ಮ ಹುಡುಗರಲ್ಲೆ ಯಾರಾದರೊಬ್ಬರು ಪೂಜೆ ಮಾಡಿ ಮುಗಿಸುತ್ತಿದ್ದೆವು, ಈ ಸಲ ನಾವು ತಂದಿದ್ದ ಗಣಪತಿ ಶ್ರೇಷ್ಠ ಬಲಮುರಿ ಗಣಪತಿಯೆಂದೂ (ಇಲಿ ಇರಲಿಲ್ಲ),ತುಂಬಾ ಮಡಿವಂತಿಕೆಯಿಂದ ಪೂಜಿಸಬೇಕೆಂದು ಕೆಲವರಿಂದ ತಿಳಿದ ಮೇಲೆ ಪೂಜಾರಿಯೊಬ್ಬರನ್ನು ಕರೆಯಿಸಿ ವಿಧಿ-ವಿಧಾನಗಳಿಂದ ಪೂಜಿಸಲಾಯಿತು.
ಅನ್ನ ಸಂತರ್ಪಣೆ ಮಾಡಿರಿ,ನಾವು ಸಹಾಯಕ್ಕಿರುತ್ತೇವೆ ಎಂದು ಕೆಲವರು ನೆರವಾದಾಗ ತಯಾರಿ ನಡೆಸಿಕೊಂಡೆವು.
5 ದಿನಕ್ಕೆ ಅಂದರೆ ಸೋಮವಾರ ವಿಸರ್ಜನೆ ಮಾಡಬೇಕೆಂದು ನಿರ್ಧಾರವಾಯಿತು. ಭಾನುವಾರ ಸಂಜೆಯಿಂದಲೇ ನಾಳೆಯ ಅನ್ನಸಂತರ್ಪಣೆಗೆ ತಯಾರಿ ಆರಂಭವಾಯಿತು. ಕೆಲವರು ತೆಂಗಿನಕಾಯಿ,ಕೆಲವರು ಅಕ್ಕಿ,ಕೆಲವರು ತರಕಾರಿ ಹೀಗೆ ಒಬ್ಬೊಬ್ಬರು ಒಂದೊಂದು ಪದಾರ್ಥ ನೀಡುತ್ತ ನೆರವಾದರು. ರಾತ್ರಿಯೆಲ್ಲ ಏರಿಯಾದವರೆಲ್ಲರೂ ತಮ್ಮ ಮನೆಕಾರ್ಯದಲ್ಲಿ ಭಾಗಿಯಾಗುವಂತೆ ಭಾಗಿಯಾದರು.

ಅನ್ನ ಸಂತರ್ಪಣೆ ಎಂಬ ಮಹತ್ಕಾರ್ಯ ನಮಗೆ ಮೊದಲಾದ್ದರಿಂದ ಹೇಗೊ ಏನೊ ಎನಿಸಿತ್ತು,ಆದರೆ ಎಲ್ಲರ ಸಹಾಯದಿಂದ ಸೋಮವಾರ ಬೆಳಿಗ್ಗೆ 7.30 ರಿಂದ 11ರವರೆಗೆ ನಡೆದ ಈ ಕಾರ್ಯದಲ್ಲಿ 1000 ಜನರಿಗೆ ಅನ್ನ ಸಂತರ್ಪಣೆ ಮಾಡುವಲ್ಲಿ ಸಫಲರಾದೆವು.
ಸಂಜೆ ವಿಸರ್ಜನೆ ಮಾಡಲು ತಮಟೆ,ನಗಾರಿ,ಬಣ್ಣ,ಪಟಾಕಿ ಎಲ್ಲವೂ ರೆಡಿಯಾಯಿತು. ಬೇಗ ಗಣಪತಿ ಎತ್ತೋಣವೆಂದು ಎಷ್ಟು ಪ್ರಯತ್ನ ಮಾಡಿದರೂ ಪ್ರತಿಸಲದಂತೆ ಈ ಸಲವೂ ತಡವಾಗಿ 8 ಗಂಟೆಯಾಯಿತು. ಇದೇ ಮೊದಲಸಲ ಸೌಂಡ್ ಸಿಸ್ಟಮನ್ನೂ ಕರೆಸಿದ್ದೆವು. ನಮ್ಮೂರಿನಿಂದ 2 ಕಿ.ಮೀ. ದೂರದಲ್ಲಿ ನಾವು ವಿಸರ್ಜನೆ ಮಾಡಬೇಕಿದ್ದರಿಂದ ಹಿರಿಯರೆಲ್ಲರೂ ಬೇಗ ಹೊರಡಿರೆಂದು ಹೇಳುತ್ತಿದ್ದರು. ಅಂತೂ ಇಂತೂ ಮೆರವಣಿಗೆ ಆರಂಭವಾದಾಗ ಆ ವಿಜೃಂಭಣೆ ನೋಡಲು ನಮಗೆರಡು ಕಣ್ಣು ಸಾಲುತ್ತಿರಲಿಲ್ಲ. ನಗರಗಳಲ್ಲಿ ನಮಗಿಂತ ಜೋರಾಗಿ
ಅಬ್ಬರಿಸಿದರೂ ನಮ್ಮೂರಿಗಿದು ಪ್ರಥಮ,ಇಷ್ಟು ಜೋರಾಗಿ ಯಾರೂ ಮಾಡಿರಲಿಲ್ಲ. ಆ ತಮಟೆಗೆ,ಸೌಂಡಿಗೆ ನಮ್ಮ ಕುಣಿತ,ಬಣ್ಣದೋಕುಳಿ.. ಆ ರಾತ್ರಿ ಊರಿಗೆ ಒಂದು ಹೊಸ ಕಳೆ ಬಂದಿತ್ತು.ನಮ್ಮ ಬಳಗದ ಕೆಲವರು ನಮ್ಮೂರಿನ ಬೇರೆ ಏರಿಯಾದ ಹುಡುಗಿಯರನ್ನು ಲವ್ ಮಾಡುತ್ತಿದ್ದುದರಿಂದ ಅವರ ಏರಿಯಾಗೆ ಮೆರವಣಿಗೆ ಹೋದಾಗಂತೂ ಅವನನ್ನು ಎತ್ತಿ ಕುಣಿಸುತ್ತಿದ್ದವು,ಮೆರೆಸುತ್ತಿದ್ದವು.. ಕೆಲ ಹಿರಿಯರು ನಮ್ಮ ಜೊತೆ ಒಂದೆರಡು ಕುಣಿತ ಹಾಕಿದ್ದರು.ಕೆಲವರಂತು ಟೈಟಾಗಿ ಕುಣಿದಿದ್ದರು,ನಮ್ಮ ಈ ಸಂಭ್ರಮಕ್ಕೆ ಕೆಲವರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದರು.
ಅಂತೂ ಕುಣಿಯುತ್ತ ಕಾಲುವೆಗೆ ಹೊರಟಾಗ ಬರೋಬ್ಬರಿ 1 ಗಂಟೆಯಾಗಿತ್ತು. ಅಷ್ಟು ದೊಡ್ಡ ಗಣಪನನ್ನು ನೀರಿಗಿಳಿಸುವಷ್ಟರಲ್ಲಿ ಸಾಕು ಸಾಕಾಯಿತು. ಮಣ್ಣಿನದಲ್ಲವಾದ್ದರಿಂದ ನೀರಿಗೆ ಬಿಟ್ಟೊಡನೆ ಮುಳುಗದೆ ಕರಗದೆ ಉರುಳಿಕೊಂಡು ಹೋಯಿತು.
ಕ್ಯಾಮೆರ ಕೊಳ್ಳುವ ನನ್ನ ಕನಸು ಇನ್ನೂ ನೆರವೇರಿಲ್ಲವಾದ್ದರಿಂದ ಆ ದೃಶ್ಯವನ್ನೆಲ್ಲ ನಿಮ್ಮೊಡನೆ ಹಂಚಿಕೊಳ್ಳಲಾಗದೆ ಇರುವುದಕ್ಕೆ ಬೇಸರವಿದೆ.

ಎಲ್ಲರಿಗೂ ಗಣಪನ ಕೃಪೆ ಇರಲಿ.

~.~



Related Posts Plugin for WordPress, Blogger...